31/12/2016
ಇಂದಿನ ಆಧುನಿಕ ಜಗತ್ತಿನಲ್ಲಿಯೇ ಹಿರಿಯ ಜೀವಿಗಳು ಒಂಟಿಯಾಗಿರುವುದು ಹೆಚ್ಚು. ಮಕ್ಕಳು, ಮೊಮ್ಮಕ್ಕಳು ಇದ್ದರೂ ಮನೆಯಲ್ಲಿ ಯಾರೂ ಇಲ್ಲದ ಪರಿಸ್ಥಿತಿ. ಇದನ್ನು ತಮ್ಮ ಸ್ವಾರ್ಥಕ್ಕೆ ಪಡೆಯುವವರೇ ಹೆಚ್ಚು. ಕಳ್ಳತನ, ದರೋಡೆಗೆ ಸಿಲುಕುವ ಅಮಾಯಕ ಜೀವಗಳ ರಕ್ಷಣೆಗೆ ನಿಷ್ಠಾವಂತ ಪೊಲೀಸ್ ಅಧಿಕಾರಿ ಆರ್ ಚೇತನ್ ಹೊಸದೊಂದು ಯೋಜನೆ ರೂಪಿಸಿದ್ದಾರೆ, ಅಂದಹಾಗೆ ಇದು ಸರಕಾರಿ ಯೋಜನೆಯಲ್ಲ. ಹಾಗಾದ್ರೆ ಏನೀ ನೆಮ್ಮದಿಯ ಯೋಜನೆ? ಹಿರಿಯ ನಾಗರಿಕರಿಗೆ ಏನು ಉಪಯೋಗವಾಗುತ್ತೆ? ಅಂತೀರಾ ಈ ಸ್ಟೋರಿ ನೋಡಿ.21ನೇ ಶತಮಾನದಲ್ಲಿ ಕೂಡು ಕುಟುಂಬಗಳು ಮರೆಯಾಗಿ ಒಂಟಿಯಾಗಿ ಜೀವಿಸುವವರ ಸಂಖ್ಯೆಯೇ ಹೆಚ್ಚು. ಮಕ್ಕಳು, ಮೊಮ್ಮಕ್ಕಳು ಇದ್ದೂ ಇಲ್ಲದಂಥವರು. ಏನೂ ಇಲ್ಲದೆ ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವವರು. ಇಂಥ ಹಿರಿಜೀವಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥ ಘಟನೆ ನಡೆದ ಮೇಲೆ ಪೊಲೀಸರು ವಿಚಾರಣೆ ನಡೆಸ್ತಾರೆ. ಆದರೆ ಇಂಥ ಅವಘಡಗಳಾದಂತೆ ಹಿರಿ ಜೀವಿಗಳ ರಕ್ಷಣೆಗೆ ಪೊಲೀಸರು ಟೊಂಕಕಟ್ಟಿ ನಿಂತರೆ? ಹೌದು. ಇಂಥದೊಂದು ಯೋಜನೆಗೆ ಬಳ್ಳಾರಿ ಪೊಲೀಸರು ರೆಡಿಯಾಗಿದ್ದಾರೆ. ನಿಷ್ಠಾವಂತ ಪೊಲೀಸ್ ಅಧಿಕಾರಿ ಆರ್ ಚೇತನ್ ಕನಸಿನ ಯೋಜನೆಯನ್ನು ರಾಜ್ಯದಲ್ಲಿಯೇ ಇದೇ ಮೊದಲ ಬಾರಿಗೆ ಹಿರಿ ಜೀವಿಗಳ ರಕ್ಷಣೆಗಾಗಿ ನೆಮ್ಮದಿ ಯೋಜನೆಯನ್ನು ಅನುಷ್ಟಾನಕ್ಕೆ ತರುತ್ತಿದ್ದಾರೆ. ಅಂದಹಾಗೆ ಇದು ರಾಜ್ಯಸರ್ಕಾರದ ಯೋಜನೆಯೇನಲ್ಲ. ಮೈಸೂರಿನಲ್ಲಿ ಕೆಲ ವರುಷಗಳ ಹಿಂದೆ ಈ ಯೋಜನೆಯಿತ್ತು. ಅದರ ಸ್ಪೂರ್ತಿಯಿಂದಾಗಿ ಬಳ್ಳಾರಿ ಜಿಲ್ಲೆಯಲ್ಲಿ ಮನೆಯಲ್ಲಿ ಒಂಟಿಯಾಗಿರುವ ಹಿರಿಯ ಜೀವಿಗಳಿಗೆ ಸಮರ್ಪಕ ಮಾಹಿತಿ, ಕೆಲಸಗಳನ್ನು ಮಾಡಿಕೊಡುವ ಯೋಜನೆ ಇದಾಗಿದೆ.
ಅಷ್ಟಕ್ಕೂ ಈ ನೆಮ್ಮದಿ ಯೋಜನೆಯನ್ನು ಪ್ರಾಯೋಗಿಕವಾಗಿ ಬಳ್ಳಾರಿ ನಗರದಲ್ಲಿ ಅನುಷ್ಟಾನ ಮಾಡಲಾಗುತ್ತಿದೆ. ಪ್ರಸ್ತುತ ಬಳ್ಳಾರಿ ನಗರದಲ್ಲಿ 280 ಹಿರಿ ಜೀವಿಗಳು ಒಂಟಿಯಾಗಿ ಜೀವಿಸುತ್ತಿದ್ದಾರೆ. ಇವರ ನಿವಾಸಕ್ಕೆ ತಿಂಗಳಿಗೊಮ್ಮೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ಹೋಗಿ ಪರಿಶೀಲನೆ ಮಾಡ್ತಾರೆ. ವಯೋವೃದ್ಧರು, ಹಿರಿಯರಿಗೆ ಬೇಕಾದ ಮಾಹಿತಿ ಕೊಡ್ತಾರೆ. ಅವರ ಬಳಿಯಿರುವ ಪುಸ್ತಕದಲ್ಲಿ ಪೊಲೀಸರು ಆಗಮಿಸಿ ವಿಚಾರಿಸಿದ್ದಕ್ಕೆ ಸಹಿ ಹಾಕಬೇಕು, ಅಲ್ಲಿನ ವಾಸಿ ಹಿರಿಯ ನಾಗರಿಕರಿಂದ ಸಹಿ ತೆಗೆದುಕೊಂಡು ಹಿರಿಯ ಪೊಲೀಸರಿಗೆ ತೋರಿಸಬೇಕು. ಇನ್ನು ಮೂರು ತಿಂಗಳಿಗೊಮ್ಮೆ ಹಿರಿಯ ಪೊಲೀಸರು ಹಿರಿಯ ನಾಗರಿಕರ ಮನೆಗೆ ಭೇಟಿ ನೀಡಿ ನಿಮ್ಮ ಜೊತೆ ನಾವಿದ್ದೇವೆ, ಹೆದರಬೇಡಿ ಎಂದು ಪ್ರೋತ್ಸಾಹದ ಮಾತುಗಳನ್ನಾಡಿ ಪರಿಶೀಲನೆ ನಡೆಸುತ್ತಾರೆ. ಈ ಕುರಿತು ಕಾರ್ಯಕ್ರಮ ನಡೆಸಿ ನೆಮ್ಮದಿಯ ಯೋಜನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದರು. ಈ ಕುರಿತು ಹಿರಿಯ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸ್ತಾರೆ.
ಖಾಕಿ ಡ್ರೆಸ್ ನಲ್ಲಿಯೇ ಭೇಟಿ ನೀಡುವ ಪೊಲೀಸರನ್ನು ಮಾತ್ರ ಮನೆ ಒಳಗಡೆ ಹಿರಿಯ ನಾಗರಿಕರು ಸೇರಿಸಿಕೊಳ್ಳುತ್ತಾರೆ. ಇಲ್ಲವಾದರಲ್ಲಿ ಪೊಲೀಸರು ಹೆಸರೇಳಿಕೊಂಡು ಕಳ್ಳತನ, ದರೋಡೆ ನಡೆಯುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ಮನೆ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರು ತಮ್ಮ ಹಿರಿ ಜೀವಗಳನ್ನು ನೋಡಿಕೊಳ್ಳುತ್ತಾರೋ ಇಲ್ಲವೋ ಬಳ್ಳಾರಿ ಪೊಲೀಸರು ಅವರ ರಕ್ಷಣೆಗೆ ನಿಂತಿರುವುದು ಉತ್ತಮ ಬೆಳವಣಿಗೆ. ಈ ಯೋಜನೆ ರಾಜ್ಯದ್ಯಾಂತ ಅನುಷ್ಟಾನಗೊಳ್ಳಲಿ ಎಂಬುದು ನೊಂದ ಹಿರಿಜೀವಿಗಳ ಆಶಯ.