12/08/2024
ರಾಜಧಾನಿ ಬೆಂಗಳೂರಿನಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಚುರುಕಗೊಂಡ ಮುಂಗಾರು ಮಳೆ ಭಾನುವಾರ ಸಂಜೆಯಿಂದ ಸೋಮವಾರ ಬೆಳಗ್ಗೆವರೆಗೂ ಜೋರಾಗಿ ಸುರಿದಿದೆ. ಪರಿಣಾಮ ನಗರವೆಲ್ಲ ಮಲೆನಾಡಿನಂತಾಗಿದೆ. ಚಳಿಯ ವಾತಾವರಣ ಸೃಷ್ಟಿಯಾಗಿದೆ. ವಾಹನ ಸವಾರರು ಸೋಮವಾರ ಬೆಳಗ್ಗೆ ಕಚೇರಿಗಳು, ನಿತ್ಯದ ಕೆಲಸಗಳಿಗೆ ಮಳೆಯಲ್ಲಿಯೇ ಸಂಚರಿಸಿದರು. ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಮಳೆ ಇನ್ನಿಲ್ಲದ ಅವಾಂತರ ಸೃಷ್ಟಿಸಿತು.
ಬೆಂಗಳೂರಿನಲ್ಲಿ ಕಳೆದ ಒಂದು 24 ಗಂಟೆಯಲ್ಲಿ ಕೊಡುಗೆಹಳ್ಳಿಯಲ್ಲಿ ಅತ್ಯಧಿಕ ಮಳೆ 61.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಉಳಿದೆಡೆ ವ್ಯಾಪಕ ಮಳೆ ಆದ ಪರಿಣಾಮ, ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ರಸ್ತೆಗಳಲ್ಲಿ ವಾಟರ್ಲಾಗಿಂಗ್ ಸಮಸ್ಯೆ ಕಂಡು ಬಂದಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರ ಸಮಸ್ಯೆ ಉಂಟಾಗಿದೆ. ಅಂಡರ್ಪಾಸ್ಗಳಲ್ಲಿ ಬಿದ್ದ ನೀರು ಸಸೂತ್ರವಾಗಿ ಹರಿಯದ ಜಲಾವೃತಗೊಂಡವು.
ವಾಹನ ಸವಾರರೇ ಗಮನಿಸಿ ನಗರದ ನಾಗವಾರ ಜಂಕ್ಷನ್ ಮತ್ತು ಹೆಬ್ಬಾಳ ನಡುವಿನ ORR ರಸ್ತೆಯ ಎರಡೂ ಕಡೆ ಸಂಚಾರ ನಿಧಾನವಾಗಿದೆ. ಹೆಬ್ಬಾಳ ಮೇಲ್ಸೇತುವೆ, ಎಸ್ಟೀಮ್ ಮಾಲ್ನಿಂದ ಮೇಖ್ರಿ ವೃತ್ತದ ಕಡೆಗೆ ಒಳಬರುವ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಸಾಗಿದೆ. ಅದೇ ರೀತಿ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ರಸ್ತೆಯ ವೀರಸಂದ್ರ ಹತ್ತಿರ ಹೊರಹೋಗುವ ವಾಹನಗಳು ದಟ್ಟಣೆಯಲ್ಲಿ ಸಿಲುಕಿದ್ದು, ಈ ರಸ್ತೆಯಲ್ಲಿ ಓಡಾಡುವವರು ಪಯಾರ್ಯ ಮಾರ್ಗ ಬಳಸುವುದು ಉತ್ತಮವಾಗಿದೆ. ಇಲ್ಲಿ ಮಾತ್ರವಲ್ಲ ಬಿಬಿಎಂಪಿ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಸಮಸ್ಯೆ ಮಾಡಿದೆ. ಅನೇಕ ಕಡೆ ವಾಟರ್ಲಾಗಿಂಗ್ ಸಮಸ್ಯೆ ಆಗಿದ್ದು, ಹೆಬ್ಬಾಳ, ಮೇಖ್ರಿ ವೃತ್ತ, ನಾಗವಾರ ಕಡೆಗಳಲ್ಲಿ ಚರಂಡಿಗೆ ಬಿದ್ದ ಮಳೆನೀರು ಸರಾಗವಾಗಿ ಹೋಗುವಂತೆ ಪೊಲೀಸರೇ ಕೈಯಿಂದ ಕಸ ಕಡ್ಡಿ ತೆಗೆದರು.
ಕಳೆದ 24 ಗಂಟೆಗಳಲ್ಲಿ ಅಂದರೆ ಇಂದು ಸೋಮವಾರ ಬೆಳಗ್ಗೆ 7.30 ಗಂಟೆಗೆ ಹೊತ್ತಿಗೆ ನಗರದಲ್ಲಿ ಉತ್ತಮ ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ. ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ? ಕೊಡುಗೆಹಳ್ಳಿ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ಆಗಿದೆ. ಉಳಿದಂತೆ ವಿವಿ ಪುರಂ ವ್ಯಾಪ್ತಿಯಲ್ಲಿ 57.5 ಮಿ.ಮೀ., ವಿದ್ಯಾಪೀಠ 56ಮಿ.ಮೀ., ನಾಯಂಡಹಳ್ಳಿ 55ಮಿ.ಮೀ., ಹಗದೂರು 54ಮಿ.ಮೀ., ರಾಜರಾಜೇಶ್ವರಿ ನಗರ 53ಮಿ.ಮೀ., ಚೌಡೇಶ್ವರಿ 51.5ಮಿ.ಮೀ., ವಿ.ನಾಗೇನಹಳ್ಳಿ 50.5ಮಿ.ಮೀ., ರಾಜರಾಜೇಶ್ವರಿ ನಗರ (2)50.5 ಮಿ.ಮೀ, ಪುಲಕೇಶಿ ನಗರ 49.5ಮಿ.ಮೀ, ಯಲಹಂಕ 49ಮಿ.ಮೀ, ಅರಕೆರೆ 48.5 ಮಿ.ಮೀ, ದೊಡ್ಡಾನೆಕ್ಕುಂದಿ 45 ಮಿ.ಮೀ, ಎಚ್ಎಸ್ಆರ್ ಬಡಾವಣೆ ಮತ್ತು ನಾಗಪುರದಲ್ಲಿ 44 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಬೆಂಗಳೂರಲ್ಲಿ ಐದು ದಿನ ಮಳೆ ಎಚ್ಚರಿಕೆ ಸೋಮವಾರ ಬೆಳಗ್ಗೆ ಚುಮು ಚುಮು ಚಳಿ ಜೊತೆಗೆ ಆಗಾಗ ಜಿಟಿ ಜಿಟಿ ಮಳೆಯ ದರ್ಶನವಾಯಿತು. ಇಂದು ಮಬ್ಬು ವಾತಾವರಣ ಇದ್ದು, ಸಂಜೆವರೆಗೆ ಮಳೆ ಹೀಗೆ ಸುರಿಯುವ ಲಕ್ಷಣ ಇದೆ. ಮುಂದಿನ ಜುಲೈ 17ರವರೆಗೆ ಬೆಂಗಳೂರಿನಾದ್ಯಂತ ವ್ಯಾಪಕ ಮಳೆ ಅಬ್ಬರ ಕಂಡು ಬರಲಿದೆ. ಆಗಾಗ ಬಿಸಿಲು ಕಂಡು ಬಂದರೂ ಮಳೆಯ ಛಾಯೆ ಹೆಚ್ಚಿರಲಿದೆ. ಚಳಿಯ ಅನುಭವ ನೀಡಲಿದ್ದು, ನಾಗರಿಕರು ಆರೋಗ್ಯ ಕಡೆಗೆ ಗಮನಹರಿಸಬೇಕಿದೆ.